ಐಟಿ ಭರ್ಜರಿ ಬೇಟೆ; ಬಾಕ್ಸ್ಗಳಲ್ಲಿ ಸಂಗ್ರಹಿಸಿಟ್ಟಿದ್ದ 42 ಕೋಟಿ ರೂಪಾಯಿ ಸೀಜ್..!
ಬಿಬಿಎಂಪಿ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಹಾಗೂ ಮಾಜಿ ಕಾರ್ಪೊರೇಟರ್ ಅಶ್ವಥಮ್ಮ ದಂಪತಿ ಮನೆಯ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ, 23 ಬಾಕ್ಸ್ಗಳಲ್ಲಿದ್ದ 42 ಕೋಟಿ ರೂಪಾಯಿ ಸೀಜ್ ಮಾಡಿದ್ದಾರೆ. ಅಶ್ವಥಮ್ಮ ಅವರು ವಾರ್ಡ್ ನಂಬರ್ 95ರಲ್ಲಿ ಕಾರ್ಪೋರೇಟರ್ ಆಗಿದ್ದರು. ಸುಲ್ತಾನ್ ಪಾಳ್ಯದಲ್ಲಿರುವ ಅವರ ಮನೆಯ ಮೇಲೆ ಐಟಿ ದಾಳಿಯಾಗಿದೆ.
ದಾಳಿ ವೇಳೆ ಮನೆಯ ಬೆಡ್ರೂಂನಲ್ಲಿ 42 ಕೋಟಿ ಹಣ ಸಿಕ್ಕಿದೆ. ಬಾಕ್ಸ್ಗಳಲ್ಲಿ ಗರಿ ಗರಿ 500 ರೂಪಾಯಿ ನೋಟಿನ ಕಂತೆಯೇ ಪತ್ತೆಯಾಗಿದೆ. 23 ಬಾಕ್ಸ್ನಲ್ಲಿ 42 ಕೋಟಿ ಹಣ ಸಿಕ್ಕಿದ್ದು, ಒಂದೊಂದು ಬಾಕ್ಸ್ ಅಲ್ಲೂ 1ಕೋಟಿ 65 ಲಕ್ಷ ಹಣ ಇಡಲಾಗಿತ್ತು. ಜಸ್ಟ್ 1 ಗಂಟೆ ಕಳೆದಿದ್ದರೆ ಹಣದ ಸಮೇತ ಎಸ್ಕೇಪ್ ಆಗುತ್ತಿದ್ದರು. ಕಾರಿನಲ್ಲಿ ತಮಿಳುನಾಡಿಗೆ ಹಣ ಸಾಗಾಟ ಮಾಡಲು ಪ್ಲಾನ್ ಮಾಡಿದ್ದರು ಎಂಬ ಮಾಹಿತಿ ಸಿಕ್ಕಿದೆ. ಪೊಲೀಸ್ ಭದ್ರತೆಯೊಂದಿಗೆ ಆರ್ ಟಿ ನಗರದ ಎರಡು ಸ್ಥಳಗಳಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಸಿಕ್ಕ ಹಣದ ಮೂಲ ಯಾವುದು, ಯಾರಿಗೆ ಸೇರಿದ್ದು ಎಂಬುದಾಗಿ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಬಳಿಕ ವಾರ್ಡ್ -95ರ ಮಾಜಿ ಕಾಂಗ್ರೆಸ್ ಕಾರ್ಪೊರೇಟರ್ ಅಶ್ವಥಮ್ಮ ಹಾಗೂ ಗುತ್ತಿಗೆದಾರ ಅಂಬಿಕಾಪತಿ ದಂಪತಿ ನಿವಾಸದ ಮೇಲೂ ಐಟಿ ರೈಡ್ ಆಗಿದೆ. ಇವರು ಮಾಜಿ ಶಾಸಕರ ಸಂಬಂಧಿಕರು ಎನ್ನಲಾಗಿದ್ದು, ಅವ್ಯವಹಾರ ನಡೆಸಿದ್ದಾರೆಂಬ ಆರೋಪದ ಮೇಲೆ ದಾಳಿ ನಡೆಸಲಾಗಿದೆ.
ಗುರುವಾರ ಸಂಜೆಯಿಂದಲೇ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಕಂತೆ ಕಂತೆ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ. ಮಂಚದ ಅಡಿಯಲ್ಲಿ ಬರೋಬ್ಬರಿ 23 ಬಾಕ್ಸ್ಗಳಲ್ಲಿ 500 ಮುಖ ಬೆಲೆಯ ಕಂತೆ ನೋಟುಗಳು ಪತ್ತೆಯಾಗಿವೆ. ಕಾರಿನಲ್ಲಿ ಹಣ ಸಾಗಾಟ ಮಾಡಲು ತಯಾರಾಗಿತ್ತು. ನಿನ್ನೆ ಸಂಜೆ 6 ಗಂಟೆಗೆ ಮಾಹಿತಿ ಬಂದ ಹಿನ್ನಲೆಯಲ್ಲಿ ಆರ್ಟಿ ನಗರದ ಎರಡು ಸ್ಥಳಗಳ ಮೇಲೆ ಏಕಕಾಲದಲ್ಲಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಕಾಂಟ್ರಾಕ್ಟರ್ ಆಗಿರುವ ಅಂಬಿಕಾಪತಿ ಕೆಂಪಣ್ಣ ಅವರ ಸಂಘದಲ್ಲಿ ಗುರುತಿಸಿಕೊಂಡಿದ್ದರು. 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದರಲ್ಲಿ ಇವರೂ ಒಬ್ಬರಾಗಿದ್ದರು. ಇವರ ಸಹೋದರ ಮನೆಯಲ್ಲಿ ಬೆಡ್ ರೂಮ್ನ ಮಂಚದ ಅಡಿಯಲ್ಲಿ ಹಣ ಸಂಗ್ರಹಿಸಿಡಲಾಗಿತ್ತು. ರೂಮ್ಗೆ ಬೀಗ ಹಾಕಲಾಗಿತ್ತು. ಪಂಚರಾಜ್ಯಗಳ ಚುನಾವಣೆಗೆ ಹಣ ಸಾಗಿಸಲು ಬೆಂಗಳೂರು ಫಂಡಿಂಗ್ ಮೂಲವಾಗಿದೆ ಎಂಬ ಮಾಹಿತಿ ಹಿನ್ನಲೆ ಐಟಿ ಅಧಿಕಾರಿಗಳು ರೈಡ್ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಸಾಲು ಸಾಲು ಗೋಲ್ಡ್ ಅಂಗಡಿ ಮಾಲೀಕರ ಮನೆ, ಕಚೇರಿ ಮೇಲೂ ದಾಳಿ ನಡೆಸಿದ್ದಾರೆ.
ತೆರಿಗೆ ವಂಚನೆ ಸಂಬಂಧ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ರಾಜಧಾನಿಯ ಚಿನ್ನಾಭರಣ ವ್ಯಾಪಾರಿಗಳು, ಉದ್ಯಮಿಗಳು, ವೈದ್ಯರ ಮನೆ, ಕಚೇರಿಗಳೂ ಸೇರಿದಂತೆ 10ಕ್ಕೂ ಹೆಚ್ಚು ಕಡೆ ಗುರುವಾರ ದಾಳಿ ನಡೆಸಿದ್ದಾರೆ.
ಹೊಸದಿಲ್ಲಿ ಹಾಗೂ ಚನ್ನೈನಿಂದ ಬಂದಿದ್ದ ಅಧಿಕಾರಿಗಳು ಮಲ್ಲೇಶ್ವರ, ಸದಾಶಿವನಗರ, ಡಾಲರ್ಸ್ ಕಾಲೋನಿ, ಮತ್ತಿಕೆರೆ, ಮುಳ್ಳೂರು, ಆರ್ಎಂವಿ ಬಡಾವಣೆ, ಸರ್ಜಾಪುರ ಸೇರಿದಂತೆ ಹಲವೆಡೆ ಏಕಕಾಲಕ್ಕೆ ದಾಳಿ ಮಾಡಿ, ಮನೆ ಹಾಗೂ ಕಚೇರಿಗಳಲ್ಲಿ ಇಂಚಿಂಚೂ ಶೋಧ ನಡೆಸಿದರು. ಹಣಕಾಸು ವಹಿವಾಟು, ತೆರಿಗೆ ಪಾವತಿ, ಬ್ಯಾಂಕ್ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಅಧಿಕಾರಿಗಳು ಜಾಲಾಡಿದರು. ತೆರಿಗೆ ವಂಚನೆಗೆ ಸಂಬಂಧಪಟ್ಟಂತೆ ಐಟಿ ಅಧಿಕಾರಿಗಳು ಅಕ್ಟೋಬರ್ 6ರಂದು ನಗರದ ಹಲವು ಚಿನ್ನಾಭರಣ ವ್ಯಾಪಾರಿಗಳ ಮೇಲೆ ದಾಳಿ ನಡೆಸಿದ್ದರು. ದಾಳಿ ವೇಳೆ ಪತ್ತೆಯಾದ ಹಣಕಾಸು ವ್ಯವಹಾರದ ದಾಖಲೆ ಪತ್ರಗಳನ್ನು ಆಧರಿಸಿ ಅಧಿಕಾರಿಗಳು ಗುರುವಾರ ಮತ್ತೆ ದಾಳಿ ಮಾಡಿದ್ದಾರೆ. ಹಿಂದಿನ ವಾರ ದಾಳಿಗೊಳಗಾಗಿದ್ದ ಚಿನ್ನಾಭರಣ ವ್ಯಾಪಾರಿಗಳೊಂದಿಗೆ ಹಣಕಾಸು ವ್ಯವಹಾರದ ನಂಟು ಹೊಂದಿದ್ದ ವ್ಯಕ್ತಿಗಳ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆದಿದೆ.
ಇನ್ನೂ ರಾಜ್ಯ ಕಾಫಿ ಬೋರ್ಡ್ ನಿರ್ದೇಶಕ ಚಂದ್ರಶೇಖರ್ ನಿವಾಸದ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು, ಹಣಕಾಸು ವ್ಯವಹಾರದ ದಾಖಲೆ ಪತ್ರಗಳನ್ನು ಪರಿಶೀಲಿಸಿದ್ದಾರೆ. ಅಲ್ಲದೆ, ಚಂದ್ರಶೇಖರ್ ಅವರ ಚರಾಸ್ತಿ ಮತ್ತು ಸ್ಥಿರಾಸ್ತಿ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಿದ್ದಾರೆ. ಹೆಬ್ಬಾಳದ ಮುನಿಸ್ವಾಮಿ ಲೇಔಟ್ನ ಬಿಲ್ಡರ್ ಮನೆ ಮೇಲೂ ದಾಳಿ ನಡೆದಿದೆ. ಇಡಿ ಅಧಿಕಾರಿಗಳಿಗೆ ದಾಳಿಯ ಮಾಹಿತಿ ನೀಡಿದ್ದು, ಅಕ್ರಮ ಹಣ ವರ್ಗಾವಣೆ ಅಡಿ ಪ್ರಕರಣ ದಾಖಲಿಗೆ ಇಡಿ ತಯಾರಿ ನಡೆಸುತ್ತಿದೆ. ಕೆಲ ದಿನಗಳ ಹಿಂದಷ್ಟೇ ಸಿಎಂ ಭೇಟಿ ಆಗಿ, ಬಾಕಿ ಬಿಲ್ ಬಿಡುಗಡೆಗೆ ಮನವಿ ಮಾಡಲಾಗಿತ್ತು. ಆಗಸ್ಟ್ 8ರಂದು ಅಂಬಿಕಾಪತಿಯವರು ಸಿದ್ದರಾಮಯ್ಯರನ್ನು ಭೇಟಿಯಾಗಿದ್ದರು.