ಜೆಡಿಎಸ್ನಿಂದ ನಾನೂ ಆಕಾಂಕ್ಷಿ, 2 ದಿನದಲ್ಲಿ ಮೈತ್ರಿ ಅಭ್ಯರ್ಥಿ ಫೈನಲ್: ಮಲ್ಲೇಶ್ ಮುನಿಸ್ವಾಮಿ
ಕೋಲಾರ: ಮೈತ್ರಿ ಹಿನ್ನೆಲೆಯಲ್ಲಿ ಕೋಲಾರ ಲೋಕಸಭಾ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಟ್ಟಿದ್ದಾರೆಂದು ನಿನ್ನೆ ಹಾಸನದಲ್ಲಿ ಕುಮಾರಸ್ವಾಮಿ ಹೇಳಿದ್ದರು. ಇಂದು ಮತ್ತೆ ಬೆಂಗಳೂರಿನಲ್ಲಿ ದೇವೇಗೌಡರು ಹೇಳಿದ್ದಾರೆ. ಹೀಗಾಗಿ ಹಾಲಿ ಬಿಜೆಪಿ ಸಂಸದರಿರುವ ಕೋಲಾರ ಲೋಕಸಭಾ ಕ್ಷೇತ್ರ ಬಹುತೇಕ ಜೆಡಿಎಸ್ ಪಕ್ಷದ ಪಾಲಾಗಿದೆ ಎನ್ನಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜೆಡಿಎಸ್ ಆಕಾಂಕ್ಷಿ ಮಲ್ಲೇಶ್ ಮುನಿಸ್ವಾಮಿ, ಕೋಲಾರ ಲೋಕಸಭಾ ಕ್ಷೇತ್ರ ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳ ವಿಚಾರದಲ್ಲಿ ಯಾವುದೇ ಕಗ್ಗಂಟಾಗಿಲ್ಲ. ಕುಮಾರಸ್ವಾಮಿ ಅವರು ಇನ್ನೆರಡು ದಿನದಲ್ಲಿ ದೆಹಲಿಗೆ ತೆರಳಿ ಅಭ್ಯರ್ಥಿಯನ್ನು ಫೈನಲ್ ಮಾಡುತ್ತಾರೆ. ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ. ಇನ್ನು ಜೆಡಿಎಸ್ ಪಕ್ಷದಲ್ಲಿ ನಿಸರ್ಗ ನಾರಾಯಣಸ್ವಾಮಿ, ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್ ಹಾಗೂ ನಾನೂ ಸಹ ಆಕಾಂಕ್ಷಿಯಾಗಿದ್ದೇನೆ. ಮೈತ್ರಿಯಾಗಿರುವ ಕಾರಣ ಅಭ್ಯರ್ಥಿ ಯಾರೆಂದು ವರಿಷ್ಠರ ಜೊತೆ ಚರ್ಚಿಸಿ ಫೈನಲ್ ಮಾಡ್ತಾರೆ ಎಂದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ 4 ಲಕ್ಷ 80 ಸಾವಿರ ಮತಗಳು ಜೆಡಿಎಸ್ ಗೆ ಬಂದಿವೆ. ಬಿಜೆಪಿಯಿಂದ ಒಂದೂವರೆ ಲಕ್ಷ ಮತದಾರರು ಇದ್ದಾರೆ. ಜೆಡಿಎಸ್ ಪಕ್ಷಕ್ಕೇ ಟಿಕೆಟ್ ಬೇಕು ಎಂದು ನಾವು ಬೇಡಿಕೆ ಇಟ್ಟಿಲ್ಲ. ಕಳೆದ ಚುನಾವಣೆಗಳಲ್ಲಿ ಜೆಡಿಎಸ್ ಪಕ್ಷಕ್ಕೆ ಇಷ್ಟು ಮತ ಬಂದಿದೆ ಹಾಗಾಗಿ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಸೀಟ್ ಕೊಡಿ ಎಂದು ಬಿಜೆಪಿ ಪಕ್ಷಕ್ಕೆ ನಮ್ಮ ವರಿಷ್ಠರು ಬೇಡಿಕೆ ಇಟ್ಟಿದ್ದಾರೆ. ಟಿಕೆಟ್ ನಮಗೇ ಬೇಕು ಎಂದು ನಾವು ಒತ್ತಡ ಹಾಕಿಲ್ಲ ಎಂದರು.
- cities
- kolar
- Kolar Loksabha Constituency Jds And Bjp Ticket Mallesh Muniswamy Aspirant About Final Selection