ಸಿದ್ದರಾಮಯ್ಯ, ಡಿಕೆಶಿ ಜಾತಿ ಪ್ರೇಮ ನೋಡಿ, ಈಡಿಗ ಸಮುದಾಯ ಕಲಿಯಬೇಕು; ಪ್ರಣವಾನಂದ ಸ್ವಾಮೀಜಿ
ಕಾರವಾರ: ಸಿದ್ದರಾಮಯ್ಯ, ಡಿಕೆಶಿ ಜಾತಿಪ್ರೇಮ ನೋಡಿ, ಈಡಿಗ ಸಮುದಾಯದ ಮುಖಂಡರು ಕಲಿಯಬೇಕು. ನಿಮ್ಮ ರಾಜಕೀಯ ಜೀವನದಲ್ಲಿ ಸಮುದಾಯವನ್ನ ಜೊತೆಯಾಗಿ ಸೇರಿಸಿಕೊಂಡು ಹೋಗದಿದ್ದಲ್ಲಿ, ಮುಂದೆ ಸೋಲು ಕಾಣುತ್ತೀರಿ ಎಂದು ಈಡಿಗ- ಬಿಲ್ಲವ- ನಾಮಧಾರಿ ಸಮುದಾಯದ ಮುಖಂಡರಿಗೆ ರಾಷ್ಟ್ರೀಯ ಈಡಿಗ ಮಹಾಮಂಡಳಿಯ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.
ಕಾರವಾರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಈ ಹಿಂದೆ 5 ವರ್ಷ ಮುಖ್ಯಮಂತ್ರಿಯಿದ್ದಾಗ ಕುರುಬ ಸಮುದಾಯದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ. ಸಮುದಾಯಕ್ಕೆ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರ, ಕಾಗಿನೆಲೆ ಅಭಿವೃದ್ಧಿ ಪೀಠ, ರಾಜ್ಯದಾದ್ಯಂತ 800ಕ್ಕೂ ಹೆಚ್ಚು ಕನಕ ಭವನಗಳು, ಕುರುಬ ಸಮುದಾಯದ ಯುವಕರು ಕಲಿಯಲು ಸರಕಾರದಿಂದ ಐಎಎಸ್ ತರಬೇತಿ ಕೇಂದ್ರಗಳನ್ನು ನೀಡಿದ್ದರು. ಆದರೆ ನಮ್ಮ ನಾಯಕರು ಸಮುದಾಯಕ್ಕೆ ಏನೂ ಮಾಡಲಿಲ್ಲ. ಡಿಕೆ ಶಿವಕುಮಾರ ಸಹ ಒಕ್ಕಲಿಗ ಸಮುದಾಯಕ್ಕೆ ಸ್ಥಾನಮಾನ ದೊರಕಿಸಿಕೊಟ್ಟಿದ್ದಾರೆ. ಆದರೆ ಈಡಿಗ ಸಮುದಾಯದ ಮುಖಂಡರಿಗೆ ಸಮುದಾಯದ ಮೇಲೆ ಪ್ರೀತಿ ಇಲ್ಲ ಎಂದರು.
ನಾಲ್ಕು ದಶಕಗಳಿಂದ ಕಾಂಗ್ರೆಸ್ನಲ್ಲಿ ಬಿಕೆ ಹರಿಪ್ರಸಾದ್ ನಿಷ್ಠಾವಂತರಾಗಿ ದುಡಿಯುತ್ತಿದ್ದಾರೆ. ಹರಿಪ್ರಸಾದ್ಗೆ ಸರ್ಕಾರದಲ್ಲಿ ಸ್ಥಾನ ಸಿಗದಿರುವುದು ದುರಂತ. ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಸಮುದಾಯಕ್ಕೆ ಒಂದೇ ಸೀಟು ನೀಡಲಾಗಿದೆ, ಇದು ಸಮುದಾಯಕ್ಕೆ ಮಾಡಿರುವ ಅನ್ಯಾಯ ಎಂದರು.
- cities
- uttara kannada
- Ediga Community Pranavananda Swamiji Reaction On Cm Siddaramaiah And Dk Shivakumar