ಖಲಿಸ್ತಾನ್ ಪರ ಹೋರಾಟಗಾರರಿಂದ ಎಎಪಿಗೆ 133 ಕೋಟಿ ರೂ., ಗುರುಪತ್ವಂತ್ ಸಿಂಗ್ ಪನ್ನು ಆರೋಪ
2014ರಲ್ಲಿ ಅಮೆರಿಕದ ನ್ಯೂಯಾರ್ಕ್ ನಗರದ ಗುರುದ್ವಾರವೊಂದಕ್ಕೆ ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಭೇಟಿ ನೀಡಿದ್ದರಂತೆ. ಈ ವೇಳೆ ಖಲಿಸ್ತಾನ್ ಪರ ಸಂಘಟನೆಗಳ ನಾಯಕರ ಜೊತೆ ಮಾತನಾಡಿದ್ದ ಕೇಜ್ರಿವಾಲ್, ಉಗ್ರ ಭಲ್ಲಾರ್ ಎಂಬಾತನನ್ನು ಜೈಲಿನಿಂದ ಬಿಡುಗಡೆ ಮಾಡಿಸುತ್ತೇವೆ ಎಂದು ಭರವಸೆ ನೀಡಿದ್ದರಂತೆ. ಇದಕ್ಕಾಗಿ ಕೋಟ್ಯಂತರ ರೂಪಾಯಿ ಹಣವನ್ನೂ ಕೇಜ್ರಿವಾಲ್ ಪಡೆದಿದ್ದಾರೆ ಎಂದು ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನು ಆರೋಪಿಸಿದ್ದಾನೆ. ಹಾಗೆ ನೋಡಿದರೆ ಈತ ಈ ಹಿಂದೆಯೂ ಕೇಜ್ರಿವಾಲ್ ವಿರುದ್ಧ ಆರೋಪಿಸಿದ್ದ...
ಅಬಕಾರಿ ನೀತಿ ವಿಚಾರವಾಗಿ ಜಾರಿ ನಿರ್ದೇಶನಾಲಯದಿಂದ ಬಂಧನ ಆಗಿರುವ ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ವಿರುದ್ಧ ಖಲಿಸ್ತಾನ್ ಪ್ರತ್ಯೇಕತಾವಾದಿ ನಾಯಕ ಗುರುಪತ್ವಂತ್ ಸಿಂಗ್ ಪನ್ನು ಗಂಭೀರ ಆರೋಪ ಮಾಡಿದ್ದಾನೆ. ಖಲಿಸ್ತಾನ್ ಪ್ರತ್ಯೇಕತಾವಾದಿ ಗುಂಪುಗಳಿಂದ ಆಮ್ ಆದ್ಮಿ ಪಕ್ಷ 16 ಮಿಲಿಯನ್ ಅಮೆರಿಕನ್ ಡಾಲರ್, ಅಂದ್ರೆ ಸುಮಾರು 133 ಕೋಟಿ ರೂಪಾಯಿ ಹಣ ಪಡೆದುಕೊಂಡಿದೆ ಎಂದು ಪನ್ನು ಆರೋಪ ಮಾಡಿದ್ಧಾನೆ.
2014 ರಿಂದ 2022ರ ನಡುವೆ ಈ ಹಣ ವರ್ಗಾವಣೆ ನಡೆದಿದೆ ಎಂದು ಪನ್ನು ಮಾಹಿತಿ ನೀಡಿದ್ದಾನೆ. ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರು ತಮಗೆ ಭರವಸೆಯೊಂದನ್ನು ನೀಡಿದ್ದರು ಎಂದೂ ಪನ್ನು ಹೇಳಿದ್ದಾನೆ. ಜೈಲು ಶಿಕ್ಷೆಗೆ ಗುರಿಯಾಗಿರುವ ಖಲಿಸ್ತಾನಿ ಉಗ್ರ ದೇವೇಂದರ್ ಪಾಲ್ ಸಿಂಗ್ ಭುಲ್ಲಾರ್ನನ್ನು ಬಿಡುಗಡೆ ಮಾಡಿಸುತ್ತೇನೆ ಎಂದು ನಂಬಿಸಿ ಹಣ ಪಡೆದಿರೋದಾಗಿ ಕೇಜ್ರಿವಾಲ್ ವಿರುದ್ದ ಪನ್ನು ಆರೋಪಿಸಿದ್ಧಾನೆ. 1993ರ ದಿಲ್ಲಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭುಲ್ಲಾರ್ ದೋಷಿ ಎಂದು ನ್ಯಾಯಾಲಯ ಹೇಳಿತ್ತು. ಅಂದು ನಡೆದ ಸ್ಫೋಟ ಘಟನೆಯಲ್ಲಿ 9 ಮಂದಿ ಮೃತಪಟ್ಟು 31 ಮಂದಿ ಗಾಯಗೊಂಡಿದ್ದರು.
ಭಾರತೀಯ ಮೂಲದವನಾದ ಗುರುಪತ್ವಂತ್ ಸಿಂಗ್ ಪನ್ನು, ಅಮೆರಿಕ ಹಾಗೂ ಕೆನಡಾ ಎರಡೂ ದೇಶಗಳ ಪೌರತ್ವ ಹೊಂದಿದ್ದಾನೆ. ಖಲಿಸ್ತಾನ್ ಪರ ನಿಲುವುಗಳನ್ನು ಪ್ರಚಾರ ಮಾಡುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಮೂಲಕವೇ ಕುಖ್ಯಾತನಾಗಿರುವ ಪನ್ನು, ಸಿಖ್ಸ್ ಫಾರ್ ಜಸ್ಟೀಸ್ ಸಂಘಟನೆಯ ಮುಖ್ಯಸ್ಥನೂ ಹೌದು.
ಅಬಕಾರಿ ನೀತಿ ರೂಪಿಸಿದ್ದ ದಿಲ್ಲಿ ಸರ್ಕಾರ, ಈ ಕುರಿತಾಗಿ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ನೀತಿ ವಾಪಸ್ ಪಡೆದಿತ್ತು. ಆದರೆ, ಇದೊಂದು ಹಗರಣವಾಗಿದ್ದು ಈ ಕುರಿತಾಗಿ ತನಿಖೆ ನಡೆಯಬೇಕು ಎಂದು ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸಿಬಿಐ ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿತ್ತು. ಈ ಪ್ರಕರಣದ ಅಡಿ ಅಕ್ರಮ ಹಣ ವರ್ಗಾವಣೆ ಆರೋಪವೂ ಕೇಳಿ ಬಂದ ಕಾರಣ ತನಿಖೆಗೆ ಮುಂದಾದ ಇಡಿ, ದಿಲ್ಲಿ ಡಿಸಿಎಂ ಮನೀಶ್ ಸಿಸೋಡಿಯಾ ಬಳಿಕ ಇದೀಗ ಸಿಎಂ ಅರವಿಂದ ಕೇಜ್ರಿವಾಲ್ ಅವರನ್ನು ಬಂಧಿಸಿದೆ.
ಈ ಬೆಳವಣಿಗೆಗಳ ನಡುವೆಯೇ ಖಲಿಸ್ತಾನ್ ಉಗ್ರ ನಾಯಕ ಪನ್ನು ಹೊಸ ಆರೋಪ ಮಾಡಿದ್ದು. 2014ರಲ್ಲಿ ಖಲಿಸ್ತಾನ್ ಪರ ನಾಯಕರ ಜೊತೆಗೆ ಕೇಜ್ರಿವಾಲ್ ಸಭೆ ನಡೆಸಿದ್ದರು ಎಂದೂ ಹೇಳಿದ್ದಾನೆ. ಅಮೆರಿಕದ ನ್ಯೂಯಾರ್ಕ್ ನಗರದ ರಿಚ್ಮಂಡ್ ಹಿಲ್ನಲ್ಲಿ ಇರುವ ಗುರುದ್ವಾರದಲ್ಲಿ ಈ ಸಭೆ ನಡೆದಿತ್ತು ಎಂದು ಪನ್ನು ಮಾಹಿತಿ ನೀಡಿದ್ದಾರೆ. ಈ ಸಭೆಯಲ್ಲಿ ಉಗ್ರ ಭುಲ್ಲಾರ್ನನ್ನು ಜೈಲಿನಿಂದ ಬಿಡುಗಡೆ ಮಾಡಿಸುವ ಭರವಸೆಯನ್ನ ಕೇಜ್ರಿವಾಲ್ ನೀಡಿದ್ದರು ಎಂದು ಪನ್ನು ಆಪಾದಿಸಿದ್ದಾನೆ.
ಹಾಗೆ ನೋಡಿದರೆ ಪನ್ನು ಹಲವು ಬಾರಿ ಕೇಜ್ರಿವಾಲ್ ವಿರುದ್ಧ ಹಣ ಪಡೆದ ಆರೋಪ ಮಾಡಿದ್ದಾನೆ. ಕಳೆದ ಜನವರಿಯಲ್ಲೂ ಕೇಜ್ರಿವಾಲ್ ವಿರುದ್ಧ ಕಿಡಿ ಕಾರಿದ್ದ ಪನ್ನು, ಪಂಜಾಬ್ ಸಿಎಂ ಭಗವಂತ ಮಾನ್ ಹಾಗೂ ಕೇಜ್ರಿವಾಲ್ ಇಬ್ಬರೂ ಕೂಡಾ ಅಮೆರಿಕ ಹಾಗೂ ಕೆನಡಾ ಮೂಲದ ಖಲಿಸ್ತಾನ್ ಪರ ಹೋರಾಟಗಾರರಿಂದ 6 ಮಿಲಿಯನ್ ಅಮೆರಿಕನ್ ಡಾಲರ್ ಹಣ ದೇಣಿಗೆ ಪಡೆದಿದ್ದಾರೆ ಎಂದು ಆರೋಪಿಸಿದ್ದ.
- news
- Aap Arvind Kejriwal Receives Rs 134 Crore Allegation By Khalistani Separatist Leader Gurpatwant Pannun