ಮೋದಿ 'ನಾ ಕಾವೂಂಗ ನಾ ಕಾನೇದೂಂಗ' ಅಂತಾರೆ, ಬಾಂಡ್ನಲ್ಲಿ ಬಿಜೆಪಿ ಹೇಗೆ ಹಣ ಮಾಡಿತು?- ಮಲ್ಲಿಕಾರ್ಜುನ ಖರ್ಗೆ
ಬೆಂಗಳೂರು: ಚುನಾವಣಾ ಬಾಂಡ್ ಮೂಲಕ ದೇಣಿಗೆ ಪಡೆದುಕೊಂಡ ವಿಚಾರವಾಗಿ ಸುಪ್ರೀಂ ಕೋರ್ಟ್ ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖೆ ನಡೆಯಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದರು. ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಬಾಂಡ್ ಮೂಲಕ ದೇಣಿಗೆ ಪಡೆದುಕೊಂಡ ವಿಚಾರ ಸುಪ್ರೀಂ ಕೋರ್ಟ್ ಮೂಲಕ ಬಹಿರಂಗವಾದ ಹಿನ್ನೆಲೆಯಲ್ಲಿ, ವಿಶೇಷ ತನಿಖೆಯ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಬಿಜೆಪಿ ಬ್ಯಾಂಕ್ ಖಾತೆ ಸ್ಥಗಿತ ಮಾಡಿ ಎಂದು ಆಗ್ರಹಿಸಿದರು.
ಬಿಜೆಪಿ ಪಕ್ಷದ ಬ್ಯಾಂಕ್ ಖಾತೆ ಸ್ಥಗಿತ ಮಾಡುವ ವಿಚಾರವಾಗಿ ಕಾಂಗ್ರೆಸ್ ಪಕ್ಷ ಕಾನೂನು ಹೋರಾಟ ಮಾಡುತ್ತಾ? ಎಂಬ ಪ್ರಶ್ನೆಗೆ, ಈ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದರು. ಪ್ರಧಾನಿ ನರೇಂದ್ರ ಮೋದಿ ನಾ ಕಾವೂಂಗ ನಾ ಕಾನೇದೂಂಗ ಎಂದು ಹೇಳುತ್ತಿದ್ದರು. ಆದರೆ, ಬಿಜೆಪಿ ಚುನಾವಣಾ ಬಾಂಡ್ ಮೂಲಕ ಹೇಗೆ ಹಣ ಮಾಡಿದೆ ಎಂಬುದು ಬಹಿರಂಗವಾಗಿದೆ. ಎಸ್ ಬಿ ಐ ಡೇಟಾ ಪ್ರಕಾರ 50% ಚುನಾವಣಾ ಬಾಂಡ್ ಬಿಜೆಪಿ ಪಾಲಾಗಿದೆ ಎಂಬುದು ಬಹಿರಂಗಗೊಂಡಿದೆ. ಕಾರ್ಪೊರೇಟ್ ಕಂಪನಿಗಳು ಹೇಗೆ ಇಷ್ಟು ಪ್ರಮಾಣದಲ್ಲಿ ಬಿಜೆಪಿಗೆ ದೇಣಿಗೆ ನೀಡಿದೆ? ಇಡಿ, ಐಟಿ ಪ್ರಕರಣಗಳಲ್ಲಿ ಸಿಕ್ಕಿಹಾಕಿಕೊಂಡ ಕಂಪನಿಗಳೇ ಹೆಚ್ಚಿನ ದೇಣಿಗೆ ನೀಡಿವೆ. ಬಿಜೆಪಿ ಈ ಕಂಪನಿಗಳಿಗೆ ಒತ್ತಡ ಹಾಕಿ ಹಣ ವಸೂಲಿ ಮಾಡಿದ್ದಾರೆಯೇ ಎಂಬುದು ಬಹಿರಂಗವಾಗಬೇಕು ಎಂದರು.
ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್ ಆಗಿದೆ . 3000 ಕೋಟಿ ಫ್ರೀಝ್ ಮಾಡಿದ್ದಾರೆ, ನಾವು ಹೇಗೆ ಚುನಾವಣೆ ನಡೆಸಲು ಸಾಧ್ಯ? 6000 ಕೋಟಿ ಚುನಾವಣಾ ಬಾಂಡ್ ಬಿಜೆಪಿಗೆ ಸಿಕ್ಕಿದೆ. ವಿರೋಧ ಪಕ್ಷಗಳ ಬ್ಯಾಂಕ್ ಖಾತೆ ಫ್ರೀಝ್ ಮಾಡಿದರೆ ಹೇಗೆ ನ್ಯಾಯಸಮ್ಮತವಾಗಿ ಚುನಾವಣಾ ನಡೆಯಲು ಸಾಧ್ಯ ಎಂದು ಪ್ರಶ್ನಿಸಿದರು.
- news
- Congress Mallikarjun Kharge Demands Freezing Of Bjps Bank Accounts Over Electoral Bonds Probe By Supreme Court