ಬಿಜೆಪಿಯಲ್ಲಿ ಹಿರಿಯ ನಾಯಕರಿಂದ ಬಂಡಾಯದ ಬಾವುಟ, ಲೋಕಸಭೆ ಚುನಾವಣೆಯ ಮೇಲೆ ಏನು ಪರಿಣಾಮ?
ರಾಜ್ಯ ಬಿಜೆಪಿಯಲ್ಲಿ ಬಂಡಾಯ ತೀವ್ರಗೊಂಡಿದೆ. ಕೆ ಎಸ್ ಈಶ್ವರಪ್ಪ ಬಂಡಾಯದ ಬೆನ್ನಲ್ಲೇ ಡಿವಿ ಸದಾನಂದ ಗೌಡರೂ ಬಂಡಾಯದ ಬಾವುಟ ಬೀಸಿದ್ದಾರೆ. ಇವರ ಜೊತೆಗೆ ಕೊಪ್ಪಳ, ದಾವಣಗೆರೆಯಲ್ಲೂ ಬಂಡಾಯದ ಬಿಸಿ ಕಾಣುತ್ತಿದೆ. ಇದು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಯಾವ ರೀತಿಯಲ್ಲಿ ಪರಿಣಾಮ ಬೀರಲಿದೆ? ಇಲ್ಲಿದೆ ವಿವರ.
ಲೋಕಸಭೆ ಚುನಾವಣೆಯ ಹೊಸ್ತಿನಲ್ಲಿ ಬಿಜೆಪಿಯಲ್ಲಿ ಬಂಡಾಯ ತೀವ್ರಗೊಂಡಿದೆ. ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಅವರು ತಮ್ಮ ಪುತ್ರನಿಗೆ ಟಿಕೆಟ್ ನೀಡಿಲ್ಲ, ಹಾಗೂ ರಾಜಕೀಯವಾಗಿ ನನ್ನನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ ಬಂಡಾಯ ಸಾರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೂ ಗೈರಾಗುವ ಮೂಲಕ ಬಿಎಸ್ವೈ ಬಣಕ್ಕೆ ಸಡ್ಡು ಹೊಡೆದಿದ್ದಾರೆ. ಮತ್ತೊಂದು ಕಡೆಯಲ್ಲಿ ಮಾಜಿ ಸಿಎಂ ಡಿವಿ ಸದಾನಂದ ಗೌಡ ಅವರು ಕೂಡಾ ಬಂಡಾಯದ ಸುಳಿವನ್ನು ನೀಡಿದ್ದಾರೆ. ಬೆಂಗಳೂರು ಉತ್ತರದ ಟಿಕೆಟ್ ಆಕಾಂಕ್ಷಿಯಾಗಿದ್ದ ಅವರಿಗೆ ಕೊನೆಯ ಗಳಿಗೆಯಲ್ಲಿ ಟಿಕೆಟ್ ಮಿಸ್ ಆಗಿದೆ.
ಈ ಇಬ್ಬರು ನಾಯಕರ ಬಂಡಾಯಕ್ಕೆ ಭಿನ್ನ ಆಯಾಮಗಳು ಇವೆ. ಈಶ್ವರಪ್ಪ ಆಕ್ರೋಶ ನೇರವಾಗಿ ಪಕ್ಷದ ಹೈಕಮಾಂಡ್ ವಿರುದ್ಧ ಅಲ್ಲ. ಅಥವಾ ರಾಷ್ಟ್ರೀಯ ಮಟ್ಟದ ನಾಯಕರ ವಿರುದ್ಧನೂ ಅಲ್ಲ. ಬದಲಾಗಿ ಅವರ ವಿರೋಧ ಇರುವುದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರ ಕುರಿತಾಗಿ. ಬಿಎಸ್ವೈ ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ. ತಮ್ಮವರಿಗೆ ಟಿಕೆಟ್ ಕೊಡಿಸುತ್ತಿದ್ದಾರೆ. ಇತರರನ್ನು ಉದ್ದೇಶಪೂರ್ವಕವಾಗಿ ದೂರ ಮಾಡುತ್ತಿದ್ದಾರೆ ಎಂಬುವುದು ಇವರ ಆರೋಪವಾಗಿದೆ. ಈ ಕಾರಣಕ್ಕಾಗಿ ನನ್ನ ಹೋರಾಟ ಬಿಜೆಪಿಯ ಮೂಲ ಸಿದ್ಧಾಂತದ ಪರವಾಗಿ ಎಂದು ಪದೇ ಪದೇ ಉಲ್ಲೇಖ ಮಾಡುತ್ತಿದ್ದಾರೆ.
ಡಿವಿ ಸದಾನಂದ ಗೌಡ ಅವರ ಅಸಮಾಧಾನಕ್ಕೆ ಬಿಎಸ್ ಯಡಿಯೂರಪ್ಪ ಕಾರಣ ಅಲ್ಲ. ಇವರ ಬಂಡಾಯ ಇರುವುದು ಹೈಕಮಾಂಡ್ ನ ಕೆಲವು ನಾಯಕರ ವಿರುದ್ಧ. ಬೆಂಗಳೂರು ಉತ್ತರ ಟಿಕೆಟ್ ಕೈತಪ್ಪುತ್ತೆ ಎಂದು ಗೊತ್ತಾದಾಗ ತಮ್ಮ ನೋವನ್ನು ಬಹಿರಂಗವಾಗಿ ತೋಡಿಕೊಂಡಿದ್ದ ಇವರಿಗೆ ಬಿಎಸ್ ಯಡಿಯೂರಪ್ಪ ಅವರು ಸಾಂತ್ವನ ಹೇಳಿದ್ದರು. ಯಾವಾಗ ಪಕ್ಷದ ಹಿಡಿತ ಬಿಎಸ್ವೈ ಬಣಕ್ಕೆ ಸಿಕ್ಕಿತೋ ಅಂದಿನಿಂದ ಡಿವಿಎಸ್ ಮಾತಿನ ವರಸೆ ಕೂಡಾ ಬದಲಾಗಿತ್ತು. ಪಕ್ಷದಲ್ಲಿ ಅವರು ಮತ್ತೆ ಸಕ್ರೀಯರಾಗಿದ್ದರು. ಚುನಾವಣಾ ನಿವೃತ್ತಿ ಘೋಷಣೆ ಮಾಡಿದ್ದ ಅವರು, ಮತ್ತೆ ತಾನು ಟಿಕೆಟ್ ಆಕಾಂಕ್ಷಿ ಎಂದು ಹೇಳಿಕೊಂಡಿದ್ದರು.