ಮಳೆ ಮುನ್ಸೂಚನೆಯಲ್ಲಿ ಕಹಾನಿ ಮೇ ಟ್ವಿಸ್ಟ್, ಮುಂಗಾರು ಪ್ರವೇಶದ ಕುರಿತು ಹವಾಮಾನ ತಜ್ಞರ ಲೆಕ್ಕಾಚಾರ ಏನು?
ತೀವ್ರ ಬರಗಾಲದಿಂದ ಕಂಗೆಟ್ಟಿದ್ದ ಕರುನಾಡಿನ ಜನತೆಗೆ ಕೆಲ ದಿನಗಳಿಂದ ವರುಣ ದೇವ ಒಂದಿಷ್ಟು ನಿರಾಳತೆಯನ್ನು ನೀಡ್ತಾ ಬಂದಿದ್ದಾನೆ. ಇದರ ಜೊತೆ ಈ ವರ್ಷ ವಾಡಿಕೆಗಿಂತ ಅಧಿಕ ಮುಂಗಾರು ಮಳೆ ಬರಲಿದೆ ಎಂದು ಐಎಂಡಿ ಕೂಡ ಮುನ್ಸೂಚನೆ ನೀಡಿದೆ. ಆದರೆ, ಕಹಾನಿ ಮೇ ಟ್ವಿಸ್ಟ್ ಎನ್ನುವಂತೆ ಮೇ ಅಂತ್ಯದಲ್ಲಿ ಮುಂಗಾರು ಪ್ರವೇಶ ಆಗಬೇಕೆಂದರೆ ವಾತಾವರಣದ ತೇವಾಂಶದಲ್ಲಿ ಏರಿಕೆಯಾಗಲೇಬೇಕು ಎನ್ನಲಾಗಿದೆ. ಇಲ್ಲದಿದ್ದರೇ ಈ ಬಾರಿಯೂ ವರುಣ ದೇವ ರಾಜ್ಯದ ಮೇಲೆ ಮುನಿಸಿಕೊಳ್ಳುವ ಸಾಧ್ಯತೆ ಇದೆ.
ನಿರೀಕ್ಷೆಯಂತೆ ರಾಜ್ಯದ ನಾನಾ ಕಡೆ ಬೇಸಿಗೆ ಮಳೆ ಒಮ್ಮೆ ಸುರಿದು ಇಳೆಯನ್ನು ತಣಿಸಿದೆ. ವಾತಾವರಣದಲ್ಲಿ ತೇವಾಂಶದ ಅಂಶ ಏರಿಕೆಯಾದರೆ ಮಾತ್ರ ಮುಂದಿನ ದಿನಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆ ಮೇ ಅಂತ್ಯದಲ್ಲಿ ಮುಂಗಾರು ಪ್ರವೇಶದ ಕುರಿತು ಐಎಂಡಿ ಅಧಿಕಾರಿಗಳು ಲೆಕ್ಕಾಚಾರಕ್ಕೆ ಇಳಿದಿದ್ದಾರೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ ವಾತಾವರಣದಲ್ಲಿ ತೇವಾಂಶದ ಅಂಶ ಶೇ.70 ಆರ್ಎಚ್ ಮೇಲಕ್ಕೆ ಹೋದರಷ್ಟೇ ಬೇಸಿಗೆ ಮಳೆಯ ಲಕ್ಷಣಗಳು ಇರಬಹುದು.
ಈಗಾಗಲೇ ಬೇಸಿಗೆ ಮಳೆ ಬಂದ ಕಾರಣದಿಂದ ವಾತಾವರಣದ ತೇವಾಂಶ ಶೇ.40 ಆರ್ಎಚ್ಗೆ ಬಂದು ತಲುಪಿದೆ. ಸಾಮಾನ್ಯವಾಗಿ ಶೇ.40ರಿಂದ 70ರ ಆಸುಪಾಸಿನಲ್ಲಿ ಇದ್ದರೆ ಮಳೆ ಸಾಧ್ಯತೆ ಇರೋದಿಲ್ಲ. ಈ ಗಡಿ ದಾಟಿ ಮುಂದೆ ಹೋದರಷ್ಟೇ ಬೇಸಿಗೆ ಮಳೆಯಾಗಬಹುದು ಎಂದು ಹೇಳಲಾಗಿದೆ. ಆದರೆ, ಬೆಂಗಳೂರು ಭಾಗದಲ್ಲಿ ಶೇ.50 ಆರ್ಎಚ್ ದಾಟಿದಾಕ್ಷಣ ಮಳೆಯಾಗಬಹುದು ಎಂಬುದು ಐಎಂಡಿ ಅಧಿಕಾರಿಗಳ ವಾದ.
ಕರಾವಳಿ ಭಾಗವನ್ನು ಬಯಲು ಪ್ರದೇಶ ಎಂದು ಪರಿಗಣಿಸಿದರೆ ಬೆಂಗಳೂರು ಹಿಲ್ ಸ್ಟೇಶನ್ ಎಂದು ಐಎಂಡಿ ಅಧಿಕಾರಿಗಳು ಪರಿಗಣಿಸುತ್ತಾರೆ. ಈಗಾಗಿ ಎಲ್ಲ ಕಡೆ ಬೇಸಿಗೆ ಮಳೆಯಾಗಬೇಕೆಂದರೆ ಶೇ.50 ರಿಂದ ಶೇ.70ರವರೆಗೆ ಆರ್ಎಚ್ ಇರಲೇಬೇಕು ಎಂದು ಐಎಂಡಿ ಅಧಿಕಾರಿಗಳು ಹೇಳಿದ್ದಾರೆ. ಇದರಿಂದ ತೇವಾಂಶ ಹೆಚ್ಚಳವಾಗಲಿ ಎಂದು ಜನರು ಆಶಿಸುತ್ತಿದ್ದಾರೆ. ರಾಜ್ಯದ ಒಳನಾಡಿನಲ್ಲಿ ಗಾಳಿಯ ದಿಕ್ಕು ಬದಲಾವಣೆ ಜತೆಗೆ ಕನ್ಯಾಕುಮಾರಿ ಹಾಗೂ ಬಂಗಾಳಕೊಲ್ಲಿಯಲ್ಲಿ ಮುಂದಿನ ದಿನಗಳಲ್ಲಿ ವಾಯಭಾರ ಕುಸಿತದ ಲಕ್ಷಣಗಳು ಗೋಚರವಾಗಿರುವುದರಿಂದ ಮಳೆಯಾಗುವ ಸಾಧ್ಯತೆ ಇದೆ.
- news
- Karnataka Drought Monsoon Rains Forecast India Meteorological Department May Month Deciding Factor