ಭ್ರಷ್ಟಾಚಾರ, ಅಕ್ರಮ ಆಸ್ತಿ ಗಳಿಕೆ ಆರೋಪ; ಅಧಿಕಾರಿಗಳ ಮನೆಗಳಲ್ಲಿ ಲೋಕಾಯುಕ್ತ ದಾಳಿ
ಭಾನುವಾರದ ರಜೆ ಮುಗಿಸಿ ಸೋಮವಾರ ಕೆಲಸಕ್ಕೆ ಹಾಜರಾಗಬೇಕಿದ್ದ ಅಧಿಕಾರಿಗಳು ಹಾಸಿಗೆಯಿಂದ ಏಳುವುದಕ್ಕೂ ಮೊದಲೇ ಲೊಕಾಯುಕ್ತ ಅಧಿಕಾರಿಗಳ ತಂಡವು ಅವರ ಮನೆಗಳಲ್ಲಿ ತಪಾಸಣೆಗೆ ಬಂದಿತ್ತು. ಬೆಳ್ಳಂಬೆಳಗ್ಗೆ ಎದುರಾದ ಲೋಕಾಯುಕ್ತ ತಂಡಕ್ಕೆ ಸರಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು ಸಹಕರಿಸದೆ ಬೇರೆ ದಾರಿಯೇ ಇರಲಿಲ್ಲ. ಅಧಿಕಾರಿಗಳ ಮನೆಗಳಲ್ಲಿ ಲೆಕ್ಕ ಇರದ ಹಣ, ಚಿನ್ನ, ಬೆಳ್ಳಿ ಸೇರಿದಂತೆ ಆಸ್ತಿಗಳ ಬಗ್ಗೆ ಲೋಕಾಯುಕ್ತ ಪರಿಶೀಲನೆ ನಡೆಸಿದೆ.
ಆದಾಯಕ್ಕಿಂತ ಹೆಚ್ಚು ಆಸ್ತಿ, ಅಕ್ರಮ ಗಳಿಕೆಗೆ ಸಂಬಂಧಿಸಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸೋಮವಾರ ಲೋಕಾಯುಕ್ತ ಅಧಿಕಾರಿಗಳ ತಂಡವು ಕಾರ್ಯಾಚರಣೆ ನಡೆಸಿದೆ. ರಾಯಚೂರು, ಬಳ್ಳಾರಿ, ಮಂಡ್ಯ, ವಿಜಯನಗರ, ಚಿತ್ರದುರ್ಗ, ತುಮಕೂರು, ಬೆಳಗಾವಿ, ಹಾವೇರಿ, ಕಲಬುರಗಿ ಸೇರಿದಂತೆ ಹಲವೆಡೆ ಅಧಿಕಾರ ಮನೆಗಳು, ಫಾರ್ಮ್ ಹೌಸ್ಗಳ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ.
ಕೋಟೆನಾಡಿನಲ್ಲಿ ಭ್ರಷ್ಟಾಚಾರದ ಆರೋಪ ಹೊತ್ತಿರುವ ಇಬ್ಬರು ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ. ಹಿರಿಯೂರು ನಗರದಲ್ಲಿರುವ ಅರಣ್ಯ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಬ್ಬರ ಮನೆಗಳಿಗೆ ಪ್ರತ್ಯೇಕ ತಂಡವಾಗಿ ಆಗಮಿಸಿದ ಲೋಕಾಯುಕ್ತ ಅಧಿಕಾರಿಗಳು ಹಲವಾರು ದಾಖಲೆಗಳನ್ನು ಸಂಗ್ರಹಿಸಿ ಪರಿಶೀಲನೆ ಮಾಡುತ್ತಿದ್ದಾರೆ. ಚಿತ್ರದುರ್ಗದ ಲೋಕಾಯುಕ್ತ ಎಸ್ಪಿ ವಾಸುದೇವ ರಾವ್ ನೇತೃತ್ವದಲ್ಲಿ ಈ ಎರಡೂ ದಾಳಿ ನಡೆಸಲಾಗಿದೆ.
- news
- Karnataka Lokayukta Raids At 70 Locations Of Government Officials Home And Office Cash Properties Recovered