Explainer Video: ಉಗ್ರ ನಾಯಕರ ಸರಣಿ ಹತ್ಯೆ: ಕೊಲ್ಲುತ್ತಿರೋದು ಯಾರು?
ವಿಶ್ವಾದ್ಯಂತ ಭಾರತ ವಿರೋಧಿ ಭಯೋತ್ಪಾದಕರ ಬೇಟೆ ನಡೆಯುತ್ತಿದೆ. ಈವರೆಗೆ 17 ಉಗ್ರರನ್ನು ಹುಡುಕಿ ಹುಡುಕಿ ಅಟ್ಟಾಡಿಸಿ ಹತ್ಯೆ ಮಾಡಲಾಗಿದೆ. ಈ ಹತ್ಯಾ ಸರಣಿ ನಿಲ್ಲುವ ಲಕ್ಷಣಗಳೇ ಕಾಣುತ್ತಿಲ್ಲ. ಯಾಕಂದ್ರೆ, ಪಾಕಿಸ್ತಾನದಲ್ಲಿ ಉಗ್ರ ನಾಯಕರ ಸರಣಿ ಹತ್ಯೆಗೆ ಇದೀಗಗ ಹೊಸ ಸೇರ್ಪಡೆಯಾಗಿದೆ. ಈ ಉಗ್ರರನ್ನು ಕೊಲ್ಲುತ್ತಿರೋದು ಯಾರು? ಅನಾಮಿಕ ಬಂದೂಕುಧಾರಿಗಳ ಉದ್ದೇಶವೇನು? ಈ ಪ್ರಶ್ನೆಗೆ ಉತ್ತರ ಹುಡುಕೋಕೆ ಸಾಧ್ಯವಾಗದೆ ಪಾಕಿಸ್ತಾನದ ಕುಖ್ಯಾತ ಬೇಹುಗಾರಿಕಾ ಪಡೆ ಐಎಸ್ಐ ಕೈ ಚೆಲ್ಲಿದೆ!
ಈತನ ಹೆಸರು ಶಾಹಿದ್ ಲತೀಫ್.. 2016ರಲ್ಲಿ ಪಂಜಾಬ್ ರಾಜ್ಯದ ಪಠಾಣ್ಕೋಟ್ ವಾಯು ನೆಲೆ ಮೇಲೆ ನಡೆದ ಭಯೋತ್ಪಾದಕ ದಾಳಿಯ ರೂವಾರಿ ಈತ. ಭಾರತದ ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿಯಲ್ಲಿ ಈತನ ಹೆಸರಿತ್ತು. ಪಾಕಿಸ್ತಾನದ ಸಿಯಾಲ್ಕೋಟ್ ಜಿಲ್ಲೆಯ ದಸ್ಕಾ ಪಟ್ಟಿಣದಲ್ಲಿ ಈತ ನೆಲೆಸಿದ್ದ. ಇವನ ರಕ್ಷಣೆಗೆ ದೊಡ್ಡ ಸಶಸ್ತ್ರ ಬೆಂಗಾವಲು ಪಡೆಯೇ ಇತ್ತು. ಪಾಕಿಸ್ತಾನ ಸೇನೆ ಹಾಗೂ ಪಾಕಿಸ್ತಾನದ ಕುಖ್ಯಾತ ಬೇಹುಗಾರಿಕಾ ಪಡೆ ಐಎಸ್ಐನ ಆಶೀರ್ವಾದವೂ ಈತನ ಮೇಲಿತ್ತು. ಯಾಕಂದ್ರೆ ಈತ ಸಾಮಾನ್ಯ ಉಗ್ರನಲ್ಲ!
ಶಾಹಿದ್ ಲತೀಫ್ 1994ರಲ್ಲಿ ಪಾಕಿಸ್ತಾನದಿಂದ ಕಾಶ್ಮೀರಕ್ಕೆ ಒಳನುಸುಳಿದ್ದ. ಈ ವೇಳೆ ಈತನನ್ನ ಬಂಧನ ಮಾಡಲಾಗಿತ್ತು. ಜೈಲಿನಲ್ಲಿ ಕುಖ್ಯಾತ ಭಯೋತ್ಪಾದಕ ಮಸೂದ್ ಅಜರ್ ಜೊತೆ ಈತನ ನಂಟು ಬೆಳೆದಿತ್ತು. ಅಂದಿನಿಂದಲೇ ಈತ ಜೈಷ್ ಎ ಮೊಹಮ್ಮದ್ ಭಯೋತ್ಪಾದಕ ಸಂಘಟನೆ ಸೇರಿದ್ದ. 1999ರಲ್ಲಿ ಇಂಡಿಯನ್ ಏರ್ಲೈನ್ಸ್ ವಿಮಾನ ಹೈಜಾಕ್ ಮಾಡಿದ್ದ ಜೈಷ್ ಉಗ್ರರು ಅದನ್ನು ಅಫ್ಘಾನಿಸ್ತಾನದ ಕಂದಹಾರ್ಗೆ ಕೊಂಡೊಯ್ದಿದ್ದರು. ಈ ವೇಳೆ ಮಸೂದ್ ಅಜರ್ ಹಾಗೂ ಶಾಹಿದ್ ಲತೀಫ್ನ ಬಿಡುಗಡೆಗೆ ಬೇಡಿಕೆ ಇಟ್ಟಿದ್ದರು. ಆಗ ಶಾಹಿದ್ನನ್ನ ಭಾರತ ಬಿಟ್ಟಿರಲಿಲ್ಲ. ಆದರೆ, 2010ರಲ್ಲಿ ಯುಪಿಎ ಸರ್ಕಾರ ಪಾಕಿಸ್ತಾನದ ಜೊತೆ ಭಾರತದ ಸಂಬಂಧ ಸುಧಾರಣೆ ನಿಟ್ಟಿನಲ್ಲಿ ಶಾಹಿದ್ ಲತೀಫ್ ಸೇರಿದಂತೆ ಹಲವು ಉಗ್ರರನ್ನ ಪಾಕಿಸ್ತಾನಕ್ಕೆ ಗಡಿಪಾರು ಮಾಡಿತ್ತು. ಇದಾದ ಬಳಿಕ ಉಗ್ರರನ್ನು ಸಂಘಟಿಸಿದ್ದ ಶಾಹಿದ್ ಲತೀಫ್, ಪಠಾಣ್ಕೋಟ್ ವಾಯು ನೆಲೆ ಮೇಲೆ ದಾಳಿ ನಡೆಸಿದ್ದ. ಭಾರತದ ಜೈಲಿನಲ್ಲೇ ಇದ್ದ ಈತನನ್ನ ಭಾರತ ಸರ್ಕಾರವೇ ಪಾಕಿಸ್ತಾನಕ್ಕೆ ರವಾನಿಸಿದ ಬಳಿಕ ಭಾರತದ ವಿರುದ್ದ ಉಗ್ರ ಕೃತ್ಯ ಎಸಗಿದ್ದ ಶಾಹಿದ್ ಲತೀಫ್ನನ್ನ ಎನ್ಐಎ ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿಗೆ ಸೇರಿಸಿತ್ತು.
newsTimesXP KannadaUpdated: 12 Oct 2023, 6:17 pm - news
- Target Killing Of Terrorists In Pakistan Worldwide Indian Enemy Terror Leaders Are In Fear Explained